Monday, October 21, 2024

ವಚನ ಸಾಹಿತ್ಯದಲ್ಲಿ ಗೋವುಗಳ ಮಹತ್ವ...



ಹೊಸ ದಿಗಂತ

22,ಅಕ್ಟೋಬರ್ 2024.

ವಚನ  ಸಾಹಿತ್ಯದಲ್ಲಿ ಗೋವುಗಳ ಮಹತ್ವ...

ಭಾರತದಲ್ಲಿ ಗೋವನ್ನ ನಮ್ಮ ರಾಷ್ಟ್ರ ಪ್ರಾಣಿ ಎಂದು ಘೋಷಿಸಲು ಮತ್ತು ಅದರ ವಧೆಯನ್ನ ನಿಷೇದಿಸುವಂತೆ ಮಾಡಿದ ನೂರಾರು ಹೋರಾಟಗಳು ಇನ್ನೂ ಸಂಪೂರ್ಣ ಫಲ ಕೊಡುವಲ್ಲಿ ವಿಫಲವಾಗಿವೆ. ಭಾರತದ ಸಂವಿಧಾನದ ವಿಧಿ 48 ರಲ್ಲಿ ಹೇಳುವಂತೆ ರಾಜ್ಯ ಸರಕಾರಗಳು ಹಸುವಿನ ತಳಿ ಸಂರಕ್ಷಣೆ ಮತ್ತು ಸುಧಾರಣೆಗೆ ಒತ್ತು ಕೊಡಬೇಕು ಹಾಗೂ ಹಸು ಕರುಗಳ ಹತ್ಯೆಯನ್ನ ನಿಷೇದಿಸುವತ್ತ ಪ್ರಯತ್ನ ಪಡಬೇಕು. ಆದರೆ ಇದು ಕೇವಲ ನಿರ್ದೇಶನಾತ್ಮಕವಾಗಿರುವುದರಿಂದ  ಧಾರ್ಮಿಕ ಪ್ರಜ್ಞೆಯಿಲ್ಲದ ರಾಜ್ಯ ಸರಕಾರಗಳು ಇದನ್ನ ಬಹುಸಂಖ್ಯಾತ ಪ್ರಜೆಗಳ ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿಯೇ ಕಾನೂನು ರಚಿಸುವುದು ಕಷ್ಟ. ಶರಣರ ನಾಡು ಕರ್ನಾಟಕದಲ್ಲಿ ಸಂಪೂರ್ಣ ಗೋಹತ್ಯೆ ನಿಷೇದವಷ್ಟೆ ಅಲ್ಲದೆ ದೇಸೀ ಹಸುಗಳ ತಳಿ ಸಂರಕ್ಷಣೆಗೂ ರಾಜ್ಯ  ಸರಕಾರ ಗಮನಹರಿಸುವಂತಾಗಬೇಕು.

ಬಸವಾದಿ ಶರಣರು ಗೋವುಗಳಿಗೆ ಇನ್ನಿಲ್ಲದ ಮಹತ್ವವನ್ನ ಕೊಟ್ಟಿದ್ದು, ಹತ್ತಾರು ವಚನಗಳಲ್ಲಿ ಗೋವುಗಳ ಬಗ್ಗೆ ಉಲ್ಲೇಖವಿದೆ. ಬಿಜ್ಜಳನ ಆಸ್ಥಾನದಲ್ಲಿ ಲೆಕ್ಕ ಪತ್ರಗಳನ್ನ ನೋಡಿಕೊಳ್ಳುತ್ತ ಗುಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಶರಣ ಗುಪ್ತ ಮಂಚಣ್ಣನವರು ಕೆಳಗಿನ ವಚನದಲ್ಲಿ ಇಡೀ ಜಗತ್ತು ಗೋವಿನ ಹಂಗಿನಲ್ಲಿದೆ ಅನ್ನುತ್ತಾರೆ,

ಜಗವೆಲ್ಲವೂ ಗೋವಿನ ಹಂಗು,

ನರ ಸುರಾದಿಗಳೆಲ್ಲರೂ ಗೋವಿನ ಹಂಗು,

ಸಕಲ ಜೀವನ ಆಧಾರ ಗೋಮರ,

ಗೋ ಪ್ರಾಣಸ್ವರೂಪ ಗೋವಿಂದನೊಡೆಯ ನಾರಾಯಣಪ್ರಿಯ ರಾಮನಾಥಾ.

 

ವಚನಕಾರ ಶರಣರು ಕಪಿಲವರ್ಣದ ನಂದಿನಿ, ಕೃಷ್ಣವರ್ಣದ ಭದ್ರೆ, ರಕ್ತವರ್ಣದ ಸುರಭಿ, ಶ್ವೇತವರ್ಣದ ಸುಶೀಲೆ ಮತ್ತು ಚಿತ್ರವರ್ಣದ ಸುಮನೆ ಎಂಬ ಪಂಚವರ್ಣದ ಗೋವುಗಳಿಗೆ ತುಂಬಾ ಮಹತ್ವಕೊಟ್ಟಿದ್ದಾರೆ. ವಿಭೂತಿ, ಪಂಚಗವ್ಯ ಹಾಗೂ ಪಂಚಾಮೃತಕ್ಕೆ ಈ ಪಂಚವರ್ಣದ ಗೋವಿನ ಗೋಮಯ, ಗೋಮೂತ್ರ ಹಾಗೂ ಹಾಲನ್ನೇ ಬಳಸಲು ಸೂಚಿಸುವಂತ ಹಲವು ವಚನಗಳಿವೆ.

 

ಇನ್ನು ಶರಣ ಷಣ್ಮುಖಸ್ವಾಮಿಯವರ ಕೆಳಗಿನ ಸುಧೀರ್ಘವಾದ ಈ ಒಂದು ವಚನವು ಜಾಬಾಲೋಪನಿಷತ್ತಿನಲ್ಲಿರುವ ಪಂಚವರ್ಣದ ಗೋವುಗಳ ಹುಟ್ಟು ಮತ್ತು ಮಹತ್ವದ ಬಗ್ಗೆ ವಿವರಿಸುತ್ತದಲ್ಲದೆ ಯಾವ ಹಸುವಿನ ಗೋಮಯದಿಂದ ಯಾವ ರೀತಿಯ ವಿಭೂತಿಯಾಗುವುದೆಂದೂ ವಿವರಿಸುತ್ತದೆ.

ಸಚ್ಚಿದಾನಂದ ಪರಶಿವನ ಸದ್ಯೋಜಾತಮುಖದಿಂದ ಪೃಥ್ವಿತತ್ತ್ವ ಪುಟ್ಟಿತ್ತು.

ಆ ತತ್ವದಿಂದೆ ನಿವೃತ್ತಿ ಎಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಕಪಿಲವರ್ಣದ ನಂದಿನಿಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಮಹದೈಶ್ವರ್ಯವನ್ನುಂಟುಮಾಡುವಂಥ ಭೂತಿ ಎಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ವಾಮದೇವಮುಖದಿಂದೆ ಅಪ್ಪುತತ್ವ ಪುಟ್ಟಿತ್ತು.

ಆ ತತ್ವದಿಂದೆ ಪ್ರತಿಷ್ಠೆಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಕೃಷ್ಣವರ್ಣದ ಭದ್ರೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ದಿವ್ಯಪ್ರಕಾಶದಿಂ ಬೆಳಗುವಂಥ ಭಸಿತವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ಅಘೋರಮುಖದಿಂದೆ ಅಗ್ನಿತತ್ವ ಪುಟ್ಟಿತ್ತು.

ಆ ತತ್ವದಿಂದೆ ವಿದ್ಯೆಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ರಕ್ತವರ್ಣದ ಸುರಭಿಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಸಮಸ್ತ ಪಾತಕಂಗಳ ಭಕ್ಷಿಸುವಂಥ ಭಸ್ಮವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ತತ್ಪುರುಷಮುಖದಿಂದೆ ವಾಯುತತ್ವ ಪುಟ್ಟಿತ್ತು.

ಆ ತತ್ವದಿಂದೆ ಶಾಂತಿಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಶ್ವೇತವರ್ಣದ ಸುಶೀಲೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಸಕಲ ವ್ಯಾಧಿಗಳ ಕೆಡಿಸುವಂಥ ಕ್ಷಾರವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ಈಶಾನ್ಯಮುಖದಿಂದೆ ಆಕಾಶತತ್ವ ಪುಟ್ಟಿತ್ತು.

ಆ ತತ್ವದಿಂದೆ ಶಾಂತ್ಯತೀತವೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಚಿತ್ರವರ್ಣದ ಸುಮನೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಭೂತ ಪ್ರೇತ ಪಿಶಾಚಿ ಬ್ರಹ್ಮರಾಕ್ಷಸ ಚೋರ ಸರ್ಪ ವ್ಯಾಘ್ರಾದಿಗಳ ಭಯವ ಕೆಡಿಸುವ ರಕ್ಷೆಯೆಂಬ ವಿಭೂತಿ ಪುಟ್ಟಿತ್ತು.

ಅದೆಂತೆಂದೊಡೆ: ಜಾಬಾಲೋಪನಿಷದಿ:

ಸದ್ಯೋಜಾತಾತ್ ಪೃಥಿವೀ ತಸ್ಯಾಃ ನಿವೃತ್ತಿಃ

ತಸ್ಯಾಃ ಗೋಮಯೇನ ವಿಭೂತಿರ್ಜಾತಾ ||

ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ

ತಸ್ಯಾಃ ಗೋಮಯೇನ ಭಸಿತಂ ಜಾತಂ ||

ಅಘೋರಾದ್ ವಹ್ನಿಃ ತಸ್ಮಾತ್ ವಿದ್ಯಾ

ತಸ್ಯಾಃ ರಕ್ತವರ್ಣಾ ಸುರಭೀ

ತಸ್ಯಾಃ ಗೋಮಯೇನ ಭಸ್ಮ ಜಾತಂ||

ತತ್ಪುರುಷಾದ್ ವಾಯುಃ ತಸ್ಮಾತ್ ಶಾಂತಿಃ

ತಸ್ಯಾಃ ಶ್ವೇತವರ್ಣಾ ಸುಶೀಲಾ

ತಸ್ಯಾಃ ಗೋಮಯೇನ ಕ್ಷಾರಂ ಜಾತಂ||

ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ

ತಸ್ಯಾಶ್ಚಿತ್ರವರ್ಣಾ ಸುಮನಾ

ತಸ್ಯಾಃ ಗೋಮಯೇನ ರಕ್ಷಾ ಜಾತಾ||''

ವಿಭೂತಿರ್ಭಸಿತಂ ಭಸ್ಮ | ಕ್ಷಾರಂ ರಕ್ಷೇತಿ ಭಸ್ಮನಃ|

ಭವಂತಿ ಪಂಚನಾಮಾನಿ| ಪಂಚಭಿರ್ನಾಮಭಿರ್ಭೃಶಮ್||''

ಐಶ್ವರ್ಯಕಾರಣಾದ್ಭೂತಿರ್ಭಾಸನಾದ್ಭಸಿತಂ ತಥಾ

ಸರ್ವಾಘಭಕ್ಷಣಾದ್ಭಸ್ಮ ಆಪದಾಂ ಕ್ಷಾರಣಾತ್ ಕ್ಷಾರಂ

ಭೂತ-ಪ್ರೇತ-ಪಿಶಾಚ ಬ್ರಹ್ಮರಾಕ್ಷಸಾಪಸ್ಮಾರ

ಭವಭೀತಿಭ್ಯೋsಭಿರಕ್ಷಣಾತ್ ರಕ್ಷೇತಿ''

ಎಂದುದಾಗಿ,

ಇಂತಪ್ಪ ಶ್ರೀ ವಿಭೂತಿಯ ನಿರಂತರ

ಸಾವಧಾನಭಕ್ತಿಯಿಂದ

ನಾನು ಸರ್ವಾಂಗದಲ್ಲಿ ಧರಸಿ ಶುದ್ಧನಿರ್ಮಲ

ಪರಮಪವಿತ್ರ ಕಾಯನಾದೆನಯ್ಯ ಅಖಂಡೇಶ್ವರಾ.

 

ಮೇಲಿನ ವಚನದಲ್ಲಿ ಜಾಬಾಲೋಪನಿಷತ್ತಿನ ಕನ್ನಡ ಅನುವಾದವಷ್ಟನ್ನೇ ಕೊಡದೆ ಸಂಸ್ಕೃತದ ಶ್ಲೋಕಗಳನ್ನೇ ಉಲ್ಲೇಖಿಸಲಾಗಿವೆ. ಶ್ರೀ ವಿಭೂತಿ ಉತ್ಪತ್ತಿಗಾಗಿ ಬೇಕಾದ ಗೋಮಯವನ್ನು ಪಂಚಗೋವುಗಳಿಂದಲೇ ಪಡೆಯಬೇಕೆಂದು ಹಲವು ಶರಣರು ಪ್ರತಿಪಾದಿಸಿದರೆ ಚನ್ನಬಸವಣ್ಣನವರು ಅದು ಯಾವ ಗೋವಿನ ಗೋಮಯವಾದರೇನು ವಿಭೂತಿ ಧರಿಸುವುದೇ ಮುಖ್ಯವೆಂದು ಹೇಳಿ ಅದರ ಮಹತ್ವವನ್ನು ಕೆಳಗಿನ ವಚನದಲ್ಲಿ ಚನ್ನಾಗಿ ವಿವರಿಸಿದ್ದಾರೆ.

 

ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ [ಮಾಡಿ]

ಧರಿಸುವ ಭೇದವೆಂತೆಂದಡೆ:

ಆವ ವರ್ಣದ ಗೋವಾದಡೆಯೂ ಸರಿಯೆ,

ಅವಯವಂಗಳು ನೂನು-ಕೂನಿಲ್ಲದೆ,

ಬರೆಗಳ ಹಾಕದೆ ಇರುವಂತಹ ಗೋವ ತಂದು,

ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ ಕ್ರಿಯಾಲಿಂಗಧಾರಣದೀಕ್ಷೆ,

ಧೂಳಪಾದೋದಕಸೇವನೆಯೆ ಮಹಾತೀರ್ಥ.

ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು.

ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ

ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ

ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋಧಿಸಿ,

ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ

ಪೂರ್ವದಲ್ಲಿ [ಗುರು] ಹೇಳಿದ ವಚನೋಕ್ತಿಯಿಂದ ಧರಿಸಿದ ಲಿಂಗಾಧಾರಕಭಕ್ತಂಗೆ

ಗುರುದೀಕ್ಷೆಯುಂಟಾಗುವುದಯ್ಯಾ,

ಉಪಾಧಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ,

ನಿರುಪಾಧಿಭಕ್ತಂಗೆ ತ್ರಿವಿಧ ಪಾದೋದಕ ಪ್ರಸಾದ ದೊರೆಯುವುದಯ್ಯಾ,

ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ,

ನಿರ್ವಂಚಕಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ,

ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ ಕೂಟಸ್ಥವಾಗಿ,

ನಿರಂಜನಜಂಗಮದಲ್ಲಿ ಕೂಡಿ ಹರಗಣಸಹವಾಗಿ

ನಿರವಯಸಮಾಧಿ ತಪ್ಪದು ನೋಡಾ ಕೂಡಲಚೆನ್ನಸಂಗಮದೇವಾ.

 

ಶ್ರೀ ವಿಭೂತಿ ಧಾರಣೆಯ ಮಹತ್ವವನ್ನು ಸೊಗಸಾಗಿ ತಿಳಿಸಿದ ಚನ್ನಬಸವಣ್ಣನವರು ಶಿವಯೋಗ ಜೀವನದ ಬಗ್ಗೆ ಬೋಧಿಸಿತ್ತಿದ್ದವರು. ಇಷ್ಟೆಲ್ಲ ಮಹತ್ವದ  ಗೋವು ಸಾಧು ಪ್ರಾಣಿ, ಪ್ರಮಾಣಿಕತೆಯ ಸಂಕೇತ ಎಂದು ಕೆಳಗಿನ ವಚನದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ.

 

ಪಾತ್ರಾಪಾತ್ರಂಗಳ ವಿಶೇಷವೇನೆಂದರೆ,

ಗೋವು ಸರ್ಪಂಗಳ ಹಾಗೆ,

ಗೋವು ಎಂಥದೆಂದರೆ ಹುಲ್ಲಿನಿಂದ ಕ್ಷೀರವ ನೀಡುವುದು,

ಸರ್ಪವೆಂಥದೆಂದರೆ ಹಾಲು ಕುಡಿದಿ ವಿಷವ ಕಕ್ಕುವುದು,

ಪಾತ್ರ ಅಪಾತ್ರ ಈ ಪ್ರಕಾರವೆಂದು ತಿಳಿವುದಯ್ಯ ಶಾಂತವೀರೇಶ್ವರಾ

-       ಏಳಂದೂರು ಪರ್ವತ ಶಿವಯೋಗಿಯ ಏಕೋತ್ತರಶಸ್ಥಲ

ಮೇಲಿನ ವಚನದಲ್ಲಿ ಪಾತ್ರ ಅಪಾರ್ಥರು ಯಾರು ಎಂಬುದನ್ನ ತುಂಬಾ ಸೂಚ್ಯವಾಗಿ ಹೇಳಿದ್ದಾರೆ. ಶರಣರು ಶ್ರೀವಿಭೂತಿಯ ಮಹತ್ವ ತಿಳಿಸುತ್ತಾ, ಗೋವುಗಳ ಪೂಜನೀಯ ಸ್ಥಾನವನ್ನೂ ವಿವರಿಸಿದ್ದಾರೆ. ಜೊತೆಗೆ ಗೋವು ರೈತನ ಮಿತ್ರನಷ್ಟೆ ಅಲ್ಲ ಮಾನವರಿಗಿಂತ ಬುದ್ಧಿವಂತ ಪ್ರಾಣಿಯೆಂದು ಪಶುಪಾಲಕರಾಗಿದ್ದ ಶರಣ ಕೋಲ ಶಾಂತಯ್ಯನವರ ವಚನ ತುಂಬಾ ಸೊಗಸಾಗಿದೆ.

ಗೋವು ಮೊದಲು ಚತುಷ್ಟಾದಿ ಜೀವಂಗಳು

ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ ಬೀಡಿಂಗೆ ಹೋಹಂತೆ,

ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ.

ಬಂದುದ ಮರೆದ ಬಂಧ ಜೀವಿಗ ನಾನಾಗಿ ಜೀವಕಾಯದ ಸಂದ ಬಿಡಿಸು.

ಬಿಂದು ನಿಲುವ ಅಂದವ ಹೇಳು,

ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

 

ಈ ರೀತಿ ಗೋವು ಮಾನವನಿಗೆ ಉಪಕಾರಿ ಹಾಗೂ ಪೂಜನೀಯವಾಗಿದೆ, ಅಂತ ಗೋವುಗಳನ್ನ ಕೊಲ್ಲಬಾರದೆಂಬುದು ಶರಣರ ಆಶಯವೇ ಆಗಿದೆ. ಗೋವುಗಳ ಕೊಲ್ಲುವವರ ಬಗ್ಗೆಯು ಉಲ್ಲೇಖವಿರುವ ಬಸವಣ್ಣನವರ ವಚನವಿದೆ. ಲಿಂಗದ ಪೂಜೆಯನ್ನ ಗೋವುಗಳ ಕೊಲುವ ಪಾಪಿಗಳ ದನಿಯು ಕೇಳುವ ಮುನ್ನವೇ ಮಾಡಬೇಕು ಎಂದು ಬಸವಣ್ಣನವರು ತಿಳಿಸಿದ್ದಾರೆ.

ಆದರೆ ಇತ್ತೀಚಿನ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರು ಹಾಗೂ ಅದನ್ನ ಸಮರ್ಥನೆ ಮಾಡುವ ಸ್ವಾಮಿಜಿಗಳು ಈ ಎಲ್ಲ ವಚನಗಳನ್ನ ಅಧ್ಯಾಯಿಸಿದ್ದಾರೆಯೇ ಅನ್ನುವುದೇ ಅನುಮಾನಕರವಾಗಿದೆ. ಇತ್ತೀಚೆಗೆ ಸಾಣಿಹಳ್ಳಿ ಮಠದ ಸ್ವಾಮಿಗಳು ಗೋ ಹತ್ಯೆಯನ್ನೇ ಕಾಯಕ ಮಾಡಿಕೊಂಡಿರುವ ಮುಸ್ಲಿಮರ ಇಸ್ಲಾಂ ಮತವನ್ನ ಲಿಂಗಾಯತಕ್ಕೆ ಸಮನಾಗಿ ಕಾಣುವಂತೆ ಹೇಳಿಕೆ ಕೊಟ್ಟಾಗ ಗೋ ಆರಾಧಕ ಸನಾತನ ಪರಂಪರೆಯ ಲಿಂಗಾಯತರ ಭಾವನೆಗಳಿಗೆ ಧಕ್ಕೆ ಆಗುವುದೆಂದು ಯೋಚಿಸಲೆ ಇಲ್ಲ.

ಬಸವಣ್ಣನವರ ಅನುಯಾಯಿಗಳಾಗಿ 8 ಶತಮಾನಗಳೇ ಕಳೆದರೂ ಲಿಂಗಾಯತರು ಬಸವಾದಿ ಶರಣರ ತತ್ವಾದರ್ಶಗಳಿಗೆ ಬದ್ದರಾಗಿ ಇಂದಿಗೂ ಸಸ್ಯಾಹಾರಿಗಳಗಿದ್ದಾರೆ. ಆದರೆ ಇತ್ತೀಚೆಗೆ ಕೆಲವರು ಶರಣರು ಮಾಂಸಾಹಾರವನ್ನ ವಿರೋದಿಸಿಲ್ಲ ಅಂತೆಲ್ಲ ಹೇಳಿಕೆ ಕೊಟ್ಟು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀಳುವಂತೆ ಮಾಡಿದ್ದಾರೆ. ಶರಣರು ಈ ಬಗ್ಗೆ ಎನನ್ನ ಹೇಳಿದ್ದಾರೆಂದು ನೋಡಿದರೆ, ಮೊದಲಿಗೆ ಬಸವಣ್ಣನವರು  ಹೇಳಿದ್ದು “ದಯವಿಲ್ಲದ ಧರ್ಮವದೇವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೇ ದರ್ಮಧ ಮೂಲವಯ್ಯ” ಎಂಬುದಾಗಿ ಸಕಲ ಜೀವ ರಾಶಿಗಳಿಗೆ ಒಳಿತನ್ನೆ ಬಯಸಿ ಹಿಂಸೆಗೆ ಕಡಿವಾಣ ಹಾಕಿದ್ದಾರೆ. ಅಲ್ಲದೆ ಬಸವಣ್ಣನವರ ಇನ್ನೊಂದು ವಚನ ಹೀಗಿದೆ

ಅಂಗದಿಚ್ಚೆಗೆ ಮದ್ಯಮಾಂಸವ ತಿಂಬರು,

ಕಂಗಳಿಚ್ಚೆಗೆ ಪರವಧುವ ನೆರೆವರು.

ಲಿಂಗಲಾಂಛನಧಾರಿಯಾದಲ್ಲಿ ಫಲವೇನು?

ಲಿಂಗಪಥವ ತಪ್ಪಿ ನಡೆವವರು

ಜಂಗಮ ಮುಖದಿಂದ ನಿಂದೆ ಬಂದಡೆ

ಕೊಂಡಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವ


ಇಲ್ಲಿ ಬಸವಣ್ಣನವರು ಮಾಂಸಾಹಾರಿಗಳು ಲಿಂಗಧಾರಣೆ ಮಾಡಿಕೊಂಡು ಲಿಂಗಪಥಕ್ಕೆ ಬಂದ ಮೇಲೆ ಮಾಂಸಹಾರವನ್ನ ತ್ಯಜಿಸಬೇಕು ಇಲ್ಲದಿದ್ದರೆ ಸಮಾಜದಲ್ಲಿ ಕೆಟ್ಟ ಹೆಸರು ಪಡೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲಾರರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಲಿಂಗವ ಕಟ್ಟಿದ್ದು ಸಾರ್ಥಕವಾಗಬೇಕೆಂದರೆ ಮಾಂಸಹಾರವನ್ನ ಸಂಪೂರ್ಣ ತ್ಯಜಿಸಲೇಬೇಕು ಎಂಬುದು. ಬಸವಣ್ಣನವರ ಈ ವಚನದ ಮೂಲ ಆಶಯ.

 

ಹೀಗೆ, ಲಿಂಗಾಯತರು ಸಂಪೂರ್ಣವಾಗಿ ಭಾರತೀಯ ಸನಾತನ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದಾರೆ, ಇಂತ ಲಿಂಗಾಯತ ಪರಂಪರೆಯನ್ನ ದುರುದ್ದೇಶದಿಂದ ಬೇರ್ಪಡಿಸಿ ಅದೊಂದು ಸ್ವತಂತ್ರ ಧರ್ಮ ಎಂದು ಹೇಳುತ್ತಾ ಅದನ್ನ ಇಸ್ಲಾಂ ಮತದೊಂದಿಗೆ ಸಮೀಕರಿಸುವುದು ಅಕ್ಷಮ್ಯ ಅಪರಾಧವಲ್ಲದೆ ಇನ್ನೇನು.

 

(ಈ ಲೇಖನದಲ್ಲಿ ಉಲ್ಲೇಖಿಸಿರುವ ವಚನಗಳು ಹಾಗೂ ವಚನಕಾರರ ಮಾಹಿತಿ: ಶ್ರೀ ತರಳಬಾಳು ಜಗದ್ಗುರು ಬ್ರಹನ್ಮಠ, ಸಿರಿಗೇರಿ)

 

ಕಿರಣ್.ಬಿ.


2 comments:

  1. 🙏ಅತ್ಯದ್ಭುತ ವಿವರಣೆ ಕಿರಣ್💖💐🚩

    ReplyDelete

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕೆಡಿಸುವ ಬೀಡುಗಳು...

15, ಮಾರ್ಚ್ 2025 ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕದಡುವ ಬೀಡುಗಳ ಅಥವಾ ಶ್ರೇಷ್ಟತೆಯ ವ್ಯಸನಿಗಳ ಮನೋ ವಿಕಾರ ಅನಾವರಣಗೊಳಿಸುವ ಸಾಧನಗಳ ಅನ್ನುವುದನ್ನ ವಿಮರ್ಶಿಸ...