Friday, November 15, 2024

ಅಂಬೇಡ್ಕರ್ ಇಸ್ಲಾಂ ಸೇರಲು ಬಯಸಿದ್ದರೆಂಬ ಸುಳ್ಳು..


ಹೊಸದಿಗಂತ

ನವೆಂಬರ್ 16, 2024.

ಚುನಾವಣಾ ರಾಜಕೀಯದ ಮೇಲಾಟದಲ್ಲಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲೇ ಬೇಕು, ಪ್ರತಿಯೊಂದು ಸಮುದಾಯವನ್ನ ಹೇಗಾದರೂ ಮಾಡಿ ಓಲೈಸಿ ವೋಟು ಗಿಟ್ಟಿಸಬೇಕು ಎಂದು ಎಲ್ಲ ರೀತಿಯ ತಂತ್ರಗಾರಿಕೆ ಮಾಡುವುದು ಹೊಸದಲ್ಲ. ಆದರೆ ಇತಿಹಾಸವನ್ನೇ ತಿರುಚುವ ಅಥವಾ ನೇರವಾಗಿ ಸುಳ್ಳು ಹೇಳುವ ಹಂತಕ್ಕೆ ಹೋಗುವುದು ಎಷ್ಟು ಸರಿ.

ಹೌದು, ಶಿಗ್ಗಾವಿ ವಿಧಾನಸಭ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಿದ ಸಯ್ಯದ್ ಅಜ್ಜಂಪೀರ್ ಖಾದ್ರಿಯವರು ಆದಿ ಜಾಂಬವ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ದತೆ ಮಾಡಿಕೊಂಡಿದ್ದರು ಆದರೆ ಕೊನೆಗೆ ಬೌದ್ಧ ಧರ್ಮ ಸೇರಿದರು, ಹಾಗೇನಾದರು ಅವರು ಇಸ್ಲಾಂಗೆ ಮತಾಂತರ ಆಗಿದ್ದರೆ ಇಂದು ಸಮಸ್ತ ದಲಿತ ಸಮಾಜ ಬಾಂಧವರು  ಮುಸಲ್ಮಾನರಾಗಿರುತ್ತಿದ್ದರು, ಡಾ. ಜಿ ಪರಮೇಶ್ವರ್ ಹೋಗಿ ಫೀರ್ ಸಾಹೇಬ್ ಆಗ್ತಿದ್ರು, ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗ್ತಿದ್ರು, ಮುಸ್ಲಿಂ-ದಲಿತರ ಸಂಬಂಧ ಅವಿನಾಭಾವದ್ದು ಅದಕ್ಕಾಗಿಯೇ ದಲಿತ ಕೆರಿಗಳಿದ್ದಲ್ಲೆಲ್ಲಾ ದರ್ಗಾಗಳಿವೆ ಎಂದು ಅವರು ಹೇಳಿದರು.

ರಾಜಕೀಯ ಲಾಭಕ್ಕಾಗಿ ಈ ದಲಿತ-ಮುಸ್ಲಿಂ ಜೋಡಣೆಯ ಹುನ್ನಾರ ಇಂದು ನಿನ್ನೆಯದಲ್ಲ. ಸ್ವಾತಂತ್ರ ಪೂರ್ವದಿಂದಲೂ ನಡೆದು ಬಂದಿರುವಂತದ್ದು. ಹಾಗಾದ್ರೆ ಅಂಬೇಡ್ಕರರ ಕುರಿತಾದ ಈ ಹೊಸ ಹೇಳಿಕೆಯಲ್ಲಿ ಎಷ್ಟು ಸತ್ಯತೆ ಅಡಗಿದೆ ಅಂತ ಇತಿಹಾಸದ ಪುಟಗಳನ್ನ ತಿರುವಿದಾಗ ಕಾಣುವುದು ಬೇರೆಯದೇ ಚಿತ್ರಣ. ಹೈದರಾಬಾದ್ ನಿಜಾಮ ಇಸ್ಲಾಂಗೆ ಮತಾಂತರವಾಗುವಂತೆ ಆಹ್ವಾನ ಕೊಟ್ಟು ಐದು ಕೋಟಿ ರೂಪಾಯಿಗಳ ಆಮಿಷ ಒಡ್ಡಿದಾಗ ಅಂಬೇಡ್ಕರರು ಅದನ್ನ ಸಾರಾಸಗಟಾಗಿ ತಿರಸ್ಕರಿಸಿದ್ದರು. ಕ್ರೈಸ್ತ ಮಿಷಿನರಿಗಳ ತಂತ್ರಕ್ಕೂ ಮಣಿದಿರಲಿಲ್ಲ. ಭಾರತೀಯ ಮೂಲ ಸಂಸ್ಕೃತಿಯ ಒಂದು ಭಾಗವೇ ಆಗಿರುವ ಬೌದ್ಧ ಧರ್ಮ ಸ್ವೀಕರಿಸಿದ್ದರು. ಯಾವುದೇ ವಿದೇಶಿ ಧರ್ಮಕ್ಕೆ ಹೋದರೂ ಅದು ಭಾರತೀಯ ಸಂಸ್ಕೃತಿಯ ವಿರುದ್ದವಾದದ್ದು ಎಂದು ಬಲವಾಗಿ ನಂಬಿದ್ದವರು. ಅಂತವರು ಇಸ್ಲಾಂಗೆ ಮತಾಂತರವಾಗಲು ಸಿದ್ದತೆ ಮಾಡಿಕೊಂಡಿದ್ದರು ಅನ್ನುವ ಹೇಳಿಕೆಯಲ್ಲಿ ಹುರುಳೇ ಇಲ್ಲ ಅನ್ನುವುದನ್ನ ಅವರ ಬರಹಗಳಿಂದಲೇ ತಿಳಿದುಕೊಳ್ಳುವ ಹೇರಳ ಅವಕಾಶ ಇರುವುದು ನಮ್ಮ ಅದೃಷ್ಟವೆ ಸರಿ, ಇಲ್ಲದಿದ್ದರೆ ರಾಜಕಾರಣಿಗಳು ಹಾರಿಸಿಬಿಡುವ ಸುಳ್ಳುಗಳೇ ಸತ್ಯವೆಂದು ನಂಬುವ ಒಂದು ದೊಡ್ಡ ಅಮಾಯಕ ವರ್ಗವೇ ಇದೆ.

ಬಾಬಾ ಸಾಹೇಬ್ ಅಂಬೇಡ್ಕರರು ಇಸ್ಲಾಂ ಕುರಿತಾದ ತಮ್ಮ ಖಚಿತವಾದ ನಿಲುವನ್ನು ಅವರ ಕೃತಿ “ಪಾಕಿಸ್ತಾನ ಆರ್ ಪಾರ್ಟೀಷನ್ ಆಫ್ ಇಂಡಿಯ”ದಲ್ಲಿ ಸ್ಪಷ್ಟವಾಗಿ ಉದಾಹರಣೆಗಳೊಂದಿಗೆ ದಾಖಲಿಸಿದ್ದಾರೆ. ಅದರ ಕೆಲವು ಮುಖ್ಯಾಂಶಗಳನ್ನ ಅವಲೋಕಿಸಿದಾಗ ಸ್ಪಷ್ಟವಾಗುವ ಒಂದು ವಿಷಯವೆಂದರೆ ಅಜ್ಜಂಪೀರ್ ಖಾದ್ರಿಯವರು ಕೇವಲ ದಲಿತ ಬಾಂಧವರ ಓಟಿಗಾಗಿ ಮಾಡಿದ ತಂತ್ರವೇ ಹೊರತು ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲವೆಂದು.

-       ಮುಸಲ್ಮಾನರು ಭಾರತಕ್ಕೆ ನಿಷ್ಟೆಯುಳ್ಳವರಾಗಿರಲು ಸಾಧ್ಯವಿಲ್ಲ. 1919 ರಲ್ಲಿ ಭಾರತೀಯ ಮುಸಲ್ಮಾನರು ಮಾಡಿದ ಖಿಲಾಫತ್ ಚಳುವಳಿಯ ಸಮಯದಲ್ಲಿ ಅಫ್ಘಾನಿಸ್ತಾನದ ಅಮೀರ್ ನಿಗೆ ಭಾರತದ ಮೇಲೆ ದಾಳಿ ಮಾಡಲು ಆಹ್ವಾನ ಕೊಟ್ಟಿದ್ದರು. (ಪುಟ 98)

-       ಇಸ್ಲಾಂ ಧರ್ಮದ ತತ್ವ: ಮುಸ್ಲಿಂ ಆಳ್ವಿಕೆಗೆ ಒಳಪಡದ ದೇಶದಲ್ಲಿ ಮುಸ್ಲಿಂ ಕಾನೂನು ಮತ್ತು ದೇಶದ ಕಾನೂನಿನ ನಡುವೆ ಸಂಘರ್ಷವಿದ್ದಲ್ಲಿ, ಮುಸಲ್ಮಾನರು ದೇಶದ ಕಾನೂನು ದಿಕ್ಕರಿಸಿ ಇಸ್ಲಾಂ ಕಾನೂನನ್ನ ಒಪ್ಪುವುದು ನ್ಯಾಯಸಮ್ಮತ (ಪುಟ 292)

-       ಮುಸಲ್ಮಾನರ ಕಾನೂನಿನಂತೆ ಪ್ರಪಂಚವು ಎರಡು ಭಾಗವಾಗಿದೆ. ಅದು ದಾರುಲ್ ಇಸ್ಲಾಂ (ಇಸ್ಲಾಂನ ಪವಿತ್ರ ಭೂಮಿ) ಮತ್ತು ದಾರುಲ್ ಹರಬ್(ಯುದ್ದ ಭೂಮಿ). ಮುಸಲ್ಮಾನರ ಆಡಳಿತ ಇರುವ ದೇಶವು ದಾರುಲ್ ಇಸ್ಲಾಂ ಅಂತ ಕರೆಯಲ್ಪಡುತ್ತದೆ. ಮುಸಲ್ಮಾನರು ಕೇವಲ ವಾಸಿಸುತ್ತಿದ್ದು ಅಲ್ಲಿ ಅವರ ಆಡಳಿತವಿಲ್ಲದಿದ್ದರೆ ಅದು ದಾರುಲ್ ಹರಬ್ ಎಂದು ಕರೆಯಲ್ಪಡುತ್ತದೆ. ಹೀಗೆ ಒಂದು ದೇಶವು ಇಸ್ಲಾಂ ದೇಶವಾಗಬಹುದು ಅಥವಾ ಯುದ್ದಭೂಮಿ ಆಗಬಹುದು. ಹಿಂದೂ-ಮುಸ್ಲಿಮರು ಸಮನಾಗಿ ಜೀವಿಸುವ ಭಾರತವು ಮುಸಲ್ಮಾನರಿಗೆ ಎಂದೂ ತಾಯ್ನೆಲವಾಗದು, ಅದು ಕೇವಲ ಯುದ್ದ ಭೂಮಿ ಅಷ್ಟೇ. (ಪುಟ 294)

-       ಭಾರತವು ಒಂದು ವೇಳೆ ಮುಸ್ಲಿಮರ ಆಳ್ವಿಕೆಗೆ ಒಳಪಡದಿದ್ದರೆ, ಅದು ದಾರುಲ್ ಹರಬ್ ಆಗಿರುತ್ತದೆ ಮತ್ತು ಇಸ್ಲಾಂನ ಪ್ರಕಾರ ಮುಸಲ್ಮಾನರು ಭಾರತದ ಮೇಲೆ ಜಿಹಾದ್ ಮಾಡಲು ಅವಕಾಶ ನೀಡುತ್ತದಲ್ಲದೆ, ಈ ಕಾರ್ಯ ಯಶಸ್ವಿ ಆಗಲು ಯಾವುದೇ ವಿದೇಶಿ ಮುಸ್ಲಿಮರ ಸಹಾಯ ತೆಗೆದುಕೊಳ್ಳಬಹುದಾಗಿದೆ ಅಥವಾ ಯಾವುದೇ ವಿದೇಶಿ ಮುಸ್ಲಿಂ ಶಕ್ತಿಯು ಭಾರತದ ಮೇಲೆ ಜಿಹಾದ್ ಘೋಷಿಸಿದರೆ ಅದಕ್ಕೆ ಮುಸಲ್ಮಾನರು ಸಹಾಯ ಮಾಡಬೇಕು. (ಪುಟ 296)

 

-       ಮತ್ತೊಂದು ಮುಖ್ಯ ಅಂಶವೆಂದರೆ, ಗಡಿ ಗುರುತಿಸುವ ಮತ್ತು ಅದಕ್ಕೆ ಒಳಪಡುವುದನ್ನ ಇಸ್ಲಾಂ ಒಪ್ಪುವುದಿಲ್ಲ ಮತ್ತು ಇದುವೆ ಅಖಂಡ ಇಸ್ಲಾಂ (ಪ್ಯಾನ್ ಇಸ್ಲಾಮಿಸ್ಮ್) ತತ್ವಕ್ಕೆ ಮೂಲಾದಾರ. ಇದುವೇ ಭಾರತದ ಮುಸಲ್ಮಾನರು ಮೊದಲು ಮುಸಲ್ಮಾನರು ಮತ್ತು ನಂತರದಲ್ಲಿ ಭಾರತೀಯ ಎಂದು ಹೇಳುವುದಕ್ಕೆ ದಾರಿ ಮಾಡಿ ಕೊಡುವ ತತ್ವ. ಇದು ಭಾರತೀಯ ಮುಸಲ್ಮಾನರು ಯಾಕೆ ಭಾರತದ ಏಳಿಗೆಗೆ ಯಾಕೆ ಕಡಿಮೆ ದುಡಿದಿದ್ದಾರೆ ಮತ್ತು ಮುಸ್ಲಿಂ ದೇಶಗಳಿಗಾಗಿಯೇ ಅವರನ್ನ ತೊಡಗಿಸಿಕೊಳ್ಳುತ್ತಾರೆ ಮತ್ತು ಅವರ ಯೋಚನೆಯಲ್ಲಿ ಮುಸ್ಲಿಂ ದೇಶಗಳು ಮೊದಲು ನಂತರ ಭಾರತ ಬರುತ್ತದೆ ಎಂಬುದನ್ನು ವಿವರಿಸುತ್ತದೆ. (ಪುಟ 297)

 

-       ಕೋಮು ಸೌಹಾರ್ದತೆ ಅಸಾಧ್ಯ: ಮುಸಲ್ಮಾನರು ದೇಶದ ಎಲ್ಲೆಡೆ ಹರಡಿರುವುದರಿಂದ ವಿಭಜನೆಯ ನಂತರವೂ ಭಾರತದಲ್ಲಿ ಉಳಿಯುವುದರಿಂದ ಏಕರೂಪದ ದೇಶವಾಗಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಭಾರತ ಏಕರೂಪತೆ ತರಲು ಜನಸಂಖ್ಯೆಯ ವಿನಿಮಯದಿಂದ ಮಾತ್ರ ಸಾಧ್ಯ. ಜನಸಂಖ್ಯೆ ವಿನಿಮಯ ಆಗುವವರೆಗೂ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಸಮಸ್ಯೆ ಮುಂದುವರೆದು ಭಾರತದ ಸಮಾಜದಲ್ಲಿ ಅಶಾಂತಿ ಉಂಟುಮಾಡಲಿದೆ. (ಪುಟ 117)

 

-       ಹಿಂದೂ ಆಡಳಿತ ಒಪ್ಪಲಾರರು: ಹಿಂದೂಗಳನ್ನೊಳಗೊಂಡ ಸರಕಾರದ ಆಡಳಿತದಲ್ಲಿ ಮುಸಲ್ಮಾನರು ಎಷ್ಟರ ಮಟ್ಟಿಗೆ ಹೊಂದಿಕೊಳ್ಳುವರು ಅನ್ನುವ ಪ್ರಶ್ನೆ ಎದ್ದರೆ, ಅದಕ್ಕೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇಲ್ಲ, ಮುಸ್ಲಿಮರಿಗೆ ಹಿಂದೂಗಳೆಂದರೆ ಕಾಫಿರರು. ಕಾಫಿರರು ಗೌರವಕ್ಕೆ ಅನರ್ಹರು. ಅವರು ಕೀಳು, ಅದಕ್ಕಾಗಿ ಅವರಿಂದ ನಡೆಸಲ್ಪಡುವ ದೇಶವು ದಾರುಲ್ ಹರಬ್, ಹಿಂದೂಗಳ ಆಡಳಿತವನ್ನು ಮುಸ್ಲಿಮರು ಒಪ್ಪುವುದಿಲ್ಲವೆನ್ನಲು ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾಗಿಲ್ಲ. (ಪುಟ 301)

ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಅಂಬೇಡ್ಕರರನ್ನ ಉಲ್ಲೇಖಿಸುವ ಸಯ್ಯದ್ ಅಜ್ಜಂಪೀರ್ ಖಾದ್ರಿಯವರು ಈ ವಿಷಯದಲ್ಲಿ ಬಹುಮುಖ್ಯವಾದ ಅವರ ಪಾಕಿಸ್ತಾನ ಆರ್ ಪಾರ್ಟೀಷನ್ ಆಫ್ ಇಂಡಿಯ ವನ್ನು ಯಾಕೆ ಓದಿಕೊಂಡಿಲ್ಲವೆನ್ನುವುದು ಆಶ್ಚರ್ಯಕರವಾದ ವಿಷಯ.

ಅಂಬೇಡ್ಕರರು ಭಾರತಿಯರಿಗೆ ಎಂದೆಂದಿಗೂ ಆದರ್ಶಪ್ರಾಯರು, ಅವರ ಅಧ್ಯಯನ ಮತ್ತು ಅನುಭವದಿಂದ ಹತ್ತಾರು ಸಲಹೆಗಳನ್ನ ಕೊಟ್ಟಿದ್ದಾರೆ. ದೇಶ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಸಿಲುಕಿದ ದಲಿತರನ್ನ ಕುರಿತು ನವೆಂಬರ್  1947 ರಲ್ಲಿ ಅಂಬೇಡ್ಕರರು ಪತ್ರಿಕಾ ಹೇಳಿಕೆ ಕೊಟ್ಟು ಅಲ್ಲಿ ಸಿಲುಕಿರುವ ದಲಿತರು ಯಾವ ಮಾರ್ಗ ಸಿಗುತ್ತದೋ ಅದನ್ನ ಹಿಡಿದು ತಕ್ಷಣ ಭಾರತಕ್ಕೆ ಬನ್ನಿ,  ಪಾಕಿಸ್ತಾನ ಮತ್ತು ಹೈದರಾಬಾದಿನ ಮುಸಲ್ಮಾನರು ನಂಬಿಕೆಗೆ ಅರ್ಹರಲ್ಲ ಅವರನ್ನ ನಂಬಬೇಡಿ ಅವರು ನಿಮ್ಮಿಂದ ಸಹಾಯ ಪಡೆಯುತ್ತಾರೆ ಆದರೆ ನೀವು ಅವರ ದೃಷ್ಟಿಯಲ್ಲಿ ಕನಿಷ್ಠ ಮತ್ತು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಇಸ್ಲಾಂಗೆ ಮತಾಂತರವಾಗಬೇಡಿ ಎಂದು ಕಳಕಳಿಯ ಕರೆ ಕೊಡುತ್ತಾರೆ.

ಹೀಗೆ, ಇಸ್ಲಾಂ ಸೌಹಾರ್ದತೆಗೆ ಪ್ರತಿಕೂಲ ವಾತಾವರಣ ನಿರ್ಮಿಸುತ್ತದೆ ಆ ಮತಕ್ಕೆ ಮತಾಂತರವಾಗಬೇಡಿ ಎಂದು ಕರೆಕೊಟ್ಟಿದ್ದ ಅಂಬೇಡ್ಕರರು ತಾವೇ ಹೇಗೆ ಅದೇ ಮತಕ್ಕೆ ಸೇರಲು ಮುಂದಾಗಿದ್ದರು ಎಂದು ಮಾನ್ಯ ಸಯ್ಯದ್ ಅಜ್ಜಂಪೀರ್ ಖಾದ್ರಿಯವರೆ ಸ್ಪಷ್ಟಪಡಿಸಬೇಕು...!!

ಕಿರಣ್. ಬಿ




Monday, October 21, 2024

ವಚನ ಸಾಹಿತ್ಯದಲ್ಲಿ ಗೋವುಗಳ ಮಹತ್ವ...



ಹೊಸ ದಿಗಂತ

22,ಅಕ್ಟೋಬರ್ 2024.

ವಚನ  ಸಾಹಿತ್ಯದಲ್ಲಿ ಗೋವುಗಳ ಮಹತ್ವ...

ಭಾರತದಲ್ಲಿ ಗೋವನ್ನ ನಮ್ಮ ರಾಷ್ಟ್ರ ಪ್ರಾಣಿ ಎಂದು ಘೋಷಿಸಲು ಮತ್ತು ಅದರ ವಧೆಯನ್ನ ನಿಷೇದಿಸುವಂತೆ ಮಾಡಿದ ನೂರಾರು ಹೋರಾಟಗಳು ಇನ್ನೂ ಸಂಪೂರ್ಣ ಫಲ ಕೊಡುವಲ್ಲಿ ವಿಫಲವಾಗಿವೆ. ಭಾರತದ ಸಂವಿಧಾನದ ವಿಧಿ 48 ರಲ್ಲಿ ಹೇಳುವಂತೆ ರಾಜ್ಯ ಸರಕಾರಗಳು ಹಸುವಿನ ತಳಿ ಸಂರಕ್ಷಣೆ ಮತ್ತು ಸುಧಾರಣೆಗೆ ಒತ್ತು ಕೊಡಬೇಕು ಹಾಗೂ ಹಸು ಕರುಗಳ ಹತ್ಯೆಯನ್ನ ನಿಷೇದಿಸುವತ್ತ ಪ್ರಯತ್ನ ಪಡಬೇಕು. ಆದರೆ ಇದು ಕೇವಲ ನಿರ್ದೇಶನಾತ್ಮಕವಾಗಿರುವುದರಿಂದ  ಧಾರ್ಮಿಕ ಪ್ರಜ್ಞೆಯಿಲ್ಲದ ರಾಜ್ಯ ಸರಕಾರಗಳು ಇದನ್ನ ಬಹುಸಂಖ್ಯಾತ ಪ್ರಜೆಗಳ ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿಯೇ ಕಾನೂನು ರಚಿಸುವುದು ಕಷ್ಟ. ಶರಣರ ನಾಡು ಕರ್ನಾಟಕದಲ್ಲಿ ಸಂಪೂರ್ಣ ಗೋಹತ್ಯೆ ನಿಷೇದವಷ್ಟೆ ಅಲ್ಲದೆ ದೇಸೀ ಹಸುಗಳ ತಳಿ ಸಂರಕ್ಷಣೆಗೂ ರಾಜ್ಯ  ಸರಕಾರ ಗಮನಹರಿಸುವಂತಾಗಬೇಕು.

ಬಸವಾದಿ ಶರಣರು ಗೋವುಗಳಿಗೆ ಇನ್ನಿಲ್ಲದ ಮಹತ್ವವನ್ನ ಕೊಟ್ಟಿದ್ದು, ಹತ್ತಾರು ವಚನಗಳಲ್ಲಿ ಗೋವುಗಳ ಬಗ್ಗೆ ಉಲ್ಲೇಖವಿದೆ. ಬಿಜ್ಜಳನ ಆಸ್ಥಾನದಲ್ಲಿ ಲೆಕ್ಕ ಪತ್ರಗಳನ್ನ ನೋಡಿಕೊಳ್ಳುತ್ತ ಗುಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಶರಣ ಗುಪ್ತ ಮಂಚಣ್ಣನವರು ಕೆಳಗಿನ ವಚನದಲ್ಲಿ ಇಡೀ ಜಗತ್ತು ಗೋವಿನ ಹಂಗಿನಲ್ಲಿದೆ ಅನ್ನುತ್ತಾರೆ,

ಜಗವೆಲ್ಲವೂ ಗೋವಿನ ಹಂಗು,

ನರ ಸುರಾದಿಗಳೆಲ್ಲರೂ ಗೋವಿನ ಹಂಗು,

ಸಕಲ ಜೀವನ ಆಧಾರ ಗೋಮರ,

ಗೋ ಪ್ರಾಣಸ್ವರೂಪ ಗೋವಿಂದನೊಡೆಯ ನಾರಾಯಣಪ್ರಿಯ ರಾಮನಾಥಾ.

 

ವಚನಕಾರ ಶರಣರು ಕಪಿಲವರ್ಣದ ನಂದಿನಿ, ಕೃಷ್ಣವರ್ಣದ ಭದ್ರೆ, ರಕ್ತವರ್ಣದ ಸುರಭಿ, ಶ್ವೇತವರ್ಣದ ಸುಶೀಲೆ ಮತ್ತು ಚಿತ್ರವರ್ಣದ ಸುಮನೆ ಎಂಬ ಪಂಚವರ್ಣದ ಗೋವುಗಳಿಗೆ ತುಂಬಾ ಮಹತ್ವಕೊಟ್ಟಿದ್ದಾರೆ. ವಿಭೂತಿ, ಪಂಚಗವ್ಯ ಹಾಗೂ ಪಂಚಾಮೃತಕ್ಕೆ ಈ ಪಂಚವರ್ಣದ ಗೋವಿನ ಗೋಮಯ, ಗೋಮೂತ್ರ ಹಾಗೂ ಹಾಲನ್ನೇ ಬಳಸಲು ಸೂಚಿಸುವಂತ ಹಲವು ವಚನಗಳಿವೆ.

 

ಇನ್ನು ಶರಣ ಷಣ್ಮುಖಸ್ವಾಮಿಯವರ ಕೆಳಗಿನ ಸುಧೀರ್ಘವಾದ ಈ ಒಂದು ವಚನವು ಜಾಬಾಲೋಪನಿಷತ್ತಿನಲ್ಲಿರುವ ಪಂಚವರ್ಣದ ಗೋವುಗಳ ಹುಟ್ಟು ಮತ್ತು ಮಹತ್ವದ ಬಗ್ಗೆ ವಿವರಿಸುತ್ತದಲ್ಲದೆ ಯಾವ ಹಸುವಿನ ಗೋಮಯದಿಂದ ಯಾವ ರೀತಿಯ ವಿಭೂತಿಯಾಗುವುದೆಂದೂ ವಿವರಿಸುತ್ತದೆ.

ಸಚ್ಚಿದಾನಂದ ಪರಶಿವನ ಸದ್ಯೋಜಾತಮುಖದಿಂದ ಪೃಥ್ವಿತತ್ತ್ವ ಪುಟ್ಟಿತ್ತು.

ಆ ತತ್ವದಿಂದೆ ನಿವೃತ್ತಿ ಎಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಕಪಿಲವರ್ಣದ ನಂದಿನಿಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಮಹದೈಶ್ವರ್ಯವನ್ನುಂಟುಮಾಡುವಂಥ ಭೂತಿ ಎಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ವಾಮದೇವಮುಖದಿಂದೆ ಅಪ್ಪುತತ್ವ ಪುಟ್ಟಿತ್ತು.

ಆ ತತ್ವದಿಂದೆ ಪ್ರತಿಷ್ಠೆಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಕೃಷ್ಣವರ್ಣದ ಭದ್ರೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ದಿವ್ಯಪ್ರಕಾಶದಿಂ ಬೆಳಗುವಂಥ ಭಸಿತವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ಅಘೋರಮುಖದಿಂದೆ ಅಗ್ನಿತತ್ವ ಪುಟ್ಟಿತ್ತು.

ಆ ತತ್ವದಿಂದೆ ವಿದ್ಯೆಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ರಕ್ತವರ್ಣದ ಸುರಭಿಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಸಮಸ್ತ ಪಾತಕಂಗಳ ಭಕ್ಷಿಸುವಂಥ ಭಸ್ಮವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ತತ್ಪುರುಷಮುಖದಿಂದೆ ವಾಯುತತ್ವ ಪುಟ್ಟಿತ್ತು.

ಆ ತತ್ವದಿಂದೆ ಶಾಂತಿಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಶ್ವೇತವರ್ಣದ ಸುಶೀಲೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಸಕಲ ವ್ಯಾಧಿಗಳ ಕೆಡಿಸುವಂಥ ಕ್ಷಾರವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ಈಶಾನ್ಯಮುಖದಿಂದೆ ಆಕಾಶತತ್ವ ಪುಟ್ಟಿತ್ತು.

ಆ ತತ್ವದಿಂದೆ ಶಾಂತ್ಯತೀತವೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಚಿತ್ರವರ್ಣದ ಸುಮನೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಭೂತ ಪ್ರೇತ ಪಿಶಾಚಿ ಬ್ರಹ್ಮರಾಕ್ಷಸ ಚೋರ ಸರ್ಪ ವ್ಯಾಘ್ರಾದಿಗಳ ಭಯವ ಕೆಡಿಸುವ ರಕ್ಷೆಯೆಂಬ ವಿಭೂತಿ ಪುಟ್ಟಿತ್ತು.

ಅದೆಂತೆಂದೊಡೆ: ಜಾಬಾಲೋಪನಿಷದಿ:

ಸದ್ಯೋಜಾತಾತ್ ಪೃಥಿವೀ ತಸ್ಯಾಃ ನಿವೃತ್ತಿಃ

ತಸ್ಯಾಃ ಗೋಮಯೇನ ವಿಭೂತಿರ್ಜಾತಾ ||

ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ

ತಸ್ಯಾಃ ಗೋಮಯೇನ ಭಸಿತಂ ಜಾತಂ ||

ಅಘೋರಾದ್ ವಹ್ನಿಃ ತಸ್ಮಾತ್ ವಿದ್ಯಾ

ತಸ್ಯಾಃ ರಕ್ತವರ್ಣಾ ಸುರಭೀ

ತಸ್ಯಾಃ ಗೋಮಯೇನ ಭಸ್ಮ ಜಾತಂ||

ತತ್ಪುರುಷಾದ್ ವಾಯುಃ ತಸ್ಮಾತ್ ಶಾಂತಿಃ

ತಸ್ಯಾಃ ಶ್ವೇತವರ್ಣಾ ಸುಶೀಲಾ

ತಸ್ಯಾಃ ಗೋಮಯೇನ ಕ್ಷಾರಂ ಜಾತಂ||

ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ

ತಸ್ಯಾಶ್ಚಿತ್ರವರ್ಣಾ ಸುಮನಾ

ತಸ್ಯಾಃ ಗೋಮಯೇನ ರಕ್ಷಾ ಜಾತಾ||''

ವಿಭೂತಿರ್ಭಸಿತಂ ಭಸ್ಮ | ಕ್ಷಾರಂ ರಕ್ಷೇತಿ ಭಸ್ಮನಃ|

ಭವಂತಿ ಪಂಚನಾಮಾನಿ| ಪಂಚಭಿರ್ನಾಮಭಿರ್ಭೃಶಮ್||''

ಐಶ್ವರ್ಯಕಾರಣಾದ್ಭೂತಿರ್ಭಾಸನಾದ್ಭಸಿತಂ ತಥಾ

ಸರ್ವಾಘಭಕ್ಷಣಾದ್ಭಸ್ಮ ಆಪದಾಂ ಕ್ಷಾರಣಾತ್ ಕ್ಷಾರಂ

ಭೂತ-ಪ್ರೇತ-ಪಿಶಾಚ ಬ್ರಹ್ಮರಾಕ್ಷಸಾಪಸ್ಮಾರ

ಭವಭೀತಿಭ್ಯೋsಭಿರಕ್ಷಣಾತ್ ರಕ್ಷೇತಿ''

ಎಂದುದಾಗಿ,

ಇಂತಪ್ಪ ಶ್ರೀ ವಿಭೂತಿಯ ನಿರಂತರ

ಸಾವಧಾನಭಕ್ತಿಯಿಂದ

ನಾನು ಸರ್ವಾಂಗದಲ್ಲಿ ಧರಸಿ ಶುದ್ಧನಿರ್ಮಲ

ಪರಮಪವಿತ್ರ ಕಾಯನಾದೆನಯ್ಯ ಅಖಂಡೇಶ್ವರಾ.

 

ಮೇಲಿನ ವಚನದಲ್ಲಿ ಜಾಬಾಲೋಪನಿಷತ್ತಿನ ಕನ್ನಡ ಅನುವಾದವಷ್ಟನ್ನೇ ಕೊಡದೆ ಸಂಸ್ಕೃತದ ಶ್ಲೋಕಗಳನ್ನೇ ಉಲ್ಲೇಖಿಸಲಾಗಿವೆ. ಶ್ರೀ ವಿಭೂತಿ ಉತ್ಪತ್ತಿಗಾಗಿ ಬೇಕಾದ ಗೋಮಯವನ್ನು ಪಂಚಗೋವುಗಳಿಂದಲೇ ಪಡೆಯಬೇಕೆಂದು ಹಲವು ಶರಣರು ಪ್ರತಿಪಾದಿಸಿದರೆ ಚನ್ನಬಸವಣ್ಣನವರು ಅದು ಯಾವ ಗೋವಿನ ಗೋಮಯವಾದರೇನು ವಿಭೂತಿ ಧರಿಸುವುದೇ ಮುಖ್ಯವೆಂದು ಹೇಳಿ ಅದರ ಮಹತ್ವವನ್ನು ಕೆಳಗಿನ ವಚನದಲ್ಲಿ ಚನ್ನಾಗಿ ವಿವರಿಸಿದ್ದಾರೆ.

 

ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ [ಮಾಡಿ]

ಧರಿಸುವ ಭೇದವೆಂತೆಂದಡೆ:

ಆವ ವರ್ಣದ ಗೋವಾದಡೆಯೂ ಸರಿಯೆ,

ಅವಯವಂಗಳು ನೂನು-ಕೂನಿಲ್ಲದೆ,

ಬರೆಗಳ ಹಾಕದೆ ಇರುವಂತಹ ಗೋವ ತಂದು,

ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ ಕ್ರಿಯಾಲಿಂಗಧಾರಣದೀಕ್ಷೆ,

ಧೂಳಪಾದೋದಕಸೇವನೆಯೆ ಮಹಾತೀರ್ಥ.

ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು.

ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ

ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ

ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋಧಿಸಿ,

ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ

ಪೂರ್ವದಲ್ಲಿ [ಗುರು] ಹೇಳಿದ ವಚನೋಕ್ತಿಯಿಂದ ಧರಿಸಿದ ಲಿಂಗಾಧಾರಕಭಕ್ತಂಗೆ

ಗುರುದೀಕ್ಷೆಯುಂಟಾಗುವುದಯ್ಯಾ,

ಉಪಾಧಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ,

ನಿರುಪಾಧಿಭಕ್ತಂಗೆ ತ್ರಿವಿಧ ಪಾದೋದಕ ಪ್ರಸಾದ ದೊರೆಯುವುದಯ್ಯಾ,

ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ,

ನಿರ್ವಂಚಕಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ,

ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ ಕೂಟಸ್ಥವಾಗಿ,

ನಿರಂಜನಜಂಗಮದಲ್ಲಿ ಕೂಡಿ ಹರಗಣಸಹವಾಗಿ

ನಿರವಯಸಮಾಧಿ ತಪ್ಪದು ನೋಡಾ ಕೂಡಲಚೆನ್ನಸಂಗಮದೇವಾ.

 

ಶ್ರೀ ವಿಭೂತಿ ಧಾರಣೆಯ ಮಹತ್ವವನ್ನು ಸೊಗಸಾಗಿ ತಿಳಿಸಿದ ಚನ್ನಬಸವಣ್ಣನವರು ಶಿವಯೋಗ ಜೀವನದ ಬಗ್ಗೆ ಬೋಧಿಸಿತ್ತಿದ್ದವರು. ಇಷ್ಟೆಲ್ಲ ಮಹತ್ವದ  ಗೋವು ಸಾಧು ಪ್ರಾಣಿ, ಪ್ರಮಾಣಿಕತೆಯ ಸಂಕೇತ ಎಂದು ಕೆಳಗಿನ ವಚನದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ.

 

ಪಾತ್ರಾಪಾತ್ರಂಗಳ ವಿಶೇಷವೇನೆಂದರೆ,

ಗೋವು ಸರ್ಪಂಗಳ ಹಾಗೆ,

ಗೋವು ಎಂಥದೆಂದರೆ ಹುಲ್ಲಿನಿಂದ ಕ್ಷೀರವ ನೀಡುವುದು,

ಸರ್ಪವೆಂಥದೆಂದರೆ ಹಾಲು ಕುಡಿದಿ ವಿಷವ ಕಕ್ಕುವುದು,

ಪಾತ್ರ ಅಪಾತ್ರ ಈ ಪ್ರಕಾರವೆಂದು ತಿಳಿವುದಯ್ಯ ಶಾಂತವೀರೇಶ್ವರಾ

-       ಏಳಂದೂರು ಪರ್ವತ ಶಿವಯೋಗಿಯ ಏಕೋತ್ತರಶಸ್ಥಲ

ಮೇಲಿನ ವಚನದಲ್ಲಿ ಪಾತ್ರ ಅಪಾರ್ಥರು ಯಾರು ಎಂಬುದನ್ನ ತುಂಬಾ ಸೂಚ್ಯವಾಗಿ ಹೇಳಿದ್ದಾರೆ. ಶರಣರು ಶ್ರೀವಿಭೂತಿಯ ಮಹತ್ವ ತಿಳಿಸುತ್ತಾ, ಗೋವುಗಳ ಪೂಜನೀಯ ಸ್ಥಾನವನ್ನೂ ವಿವರಿಸಿದ್ದಾರೆ. ಜೊತೆಗೆ ಗೋವು ರೈತನ ಮಿತ್ರನಷ್ಟೆ ಅಲ್ಲ ಮಾನವರಿಗಿಂತ ಬುದ್ಧಿವಂತ ಪ್ರಾಣಿಯೆಂದು ಪಶುಪಾಲಕರಾಗಿದ್ದ ಶರಣ ಕೋಲ ಶಾಂತಯ್ಯನವರ ವಚನ ತುಂಬಾ ಸೊಗಸಾಗಿದೆ.

ಗೋವು ಮೊದಲು ಚತುಷ್ಟಾದಿ ಜೀವಂಗಳು

ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ ಬೀಡಿಂಗೆ ಹೋಹಂತೆ,

ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ.

ಬಂದುದ ಮರೆದ ಬಂಧ ಜೀವಿಗ ನಾನಾಗಿ ಜೀವಕಾಯದ ಸಂದ ಬಿಡಿಸು.

ಬಿಂದು ನಿಲುವ ಅಂದವ ಹೇಳು,

ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

 

ಈ ರೀತಿ ಗೋವು ಮಾನವನಿಗೆ ಉಪಕಾರಿ ಹಾಗೂ ಪೂಜನೀಯವಾಗಿದೆ, ಅಂತ ಗೋವುಗಳನ್ನ ಕೊಲ್ಲಬಾರದೆಂಬುದು ಶರಣರ ಆಶಯವೇ ಆಗಿದೆ. ಗೋವುಗಳ ಕೊಲ್ಲುವವರ ಬಗ್ಗೆಯು ಉಲ್ಲೇಖವಿರುವ ಬಸವಣ್ಣನವರ ವಚನವಿದೆ. ಲಿಂಗದ ಪೂಜೆಯನ್ನ ಗೋವುಗಳ ಕೊಲುವ ಪಾಪಿಗಳ ದನಿಯು ಕೇಳುವ ಮುನ್ನವೇ ಮಾಡಬೇಕು ಎಂದು ಬಸವಣ್ಣನವರು ತಿಳಿಸಿದ್ದಾರೆ.

ಆದರೆ ಇತ್ತೀಚಿನ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರು ಹಾಗೂ ಅದನ್ನ ಸಮರ್ಥನೆ ಮಾಡುವ ಸ್ವಾಮಿಜಿಗಳು ಈ ಎಲ್ಲ ವಚನಗಳನ್ನ ಅಧ್ಯಾಯಿಸಿದ್ದಾರೆಯೇ ಅನ್ನುವುದೇ ಅನುಮಾನಕರವಾಗಿದೆ. ಇತ್ತೀಚೆಗೆ ಸಾಣಿಹಳ್ಳಿ ಮಠದ ಸ್ವಾಮಿಗಳು ಗೋ ಹತ್ಯೆಯನ್ನೇ ಕಾಯಕ ಮಾಡಿಕೊಂಡಿರುವ ಮುಸ್ಲಿಮರ ಇಸ್ಲಾಂ ಮತವನ್ನ ಲಿಂಗಾಯತಕ್ಕೆ ಸಮನಾಗಿ ಕಾಣುವಂತೆ ಹೇಳಿಕೆ ಕೊಟ್ಟಾಗ ಗೋ ಆರಾಧಕ ಸನಾತನ ಪರಂಪರೆಯ ಲಿಂಗಾಯತರ ಭಾವನೆಗಳಿಗೆ ಧಕ್ಕೆ ಆಗುವುದೆಂದು ಯೋಚಿಸಲೆ ಇಲ್ಲ.

ಬಸವಣ್ಣನವರ ಅನುಯಾಯಿಗಳಾಗಿ 8 ಶತಮಾನಗಳೇ ಕಳೆದರೂ ಲಿಂಗಾಯತರು ಬಸವಾದಿ ಶರಣರ ತತ್ವಾದರ್ಶಗಳಿಗೆ ಬದ್ದರಾಗಿ ಇಂದಿಗೂ ಸಸ್ಯಾಹಾರಿಗಳಗಿದ್ದಾರೆ. ಆದರೆ ಇತ್ತೀಚೆಗೆ ಕೆಲವರು ಶರಣರು ಮಾಂಸಾಹಾರವನ್ನ ವಿರೋದಿಸಿಲ್ಲ ಅಂತೆಲ್ಲ ಹೇಳಿಕೆ ಕೊಟ್ಟು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀಳುವಂತೆ ಮಾಡಿದ್ದಾರೆ. ಶರಣರು ಈ ಬಗ್ಗೆ ಎನನ್ನ ಹೇಳಿದ್ದಾರೆಂದು ನೋಡಿದರೆ, ಮೊದಲಿಗೆ ಬಸವಣ್ಣನವರು  ಹೇಳಿದ್ದು “ದಯವಿಲ್ಲದ ಧರ್ಮವದೇವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೇ ದರ್ಮಧ ಮೂಲವಯ್ಯ” ಎಂಬುದಾಗಿ ಸಕಲ ಜೀವ ರಾಶಿಗಳಿಗೆ ಒಳಿತನ್ನೆ ಬಯಸಿ ಹಿಂಸೆಗೆ ಕಡಿವಾಣ ಹಾಕಿದ್ದಾರೆ. ಅಲ್ಲದೆ ಬಸವಣ್ಣನವರ ಇನ್ನೊಂದು ವಚನ ಹೀಗಿದೆ

ಅಂಗದಿಚ್ಚೆಗೆ ಮದ್ಯಮಾಂಸವ ತಿಂಬರು,

ಕಂಗಳಿಚ್ಚೆಗೆ ಪರವಧುವ ನೆರೆವರು.

ಲಿಂಗಲಾಂಛನಧಾರಿಯಾದಲ್ಲಿ ಫಲವೇನು?

ಲಿಂಗಪಥವ ತಪ್ಪಿ ನಡೆವವರು

ಜಂಗಮ ಮುಖದಿಂದ ನಿಂದೆ ಬಂದಡೆ

ಕೊಂಡಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವ


ಇಲ್ಲಿ ಬಸವಣ್ಣನವರು ಮಾಂಸಾಹಾರಿಗಳು ಲಿಂಗಧಾರಣೆ ಮಾಡಿಕೊಂಡು ಲಿಂಗಪಥಕ್ಕೆ ಬಂದ ಮೇಲೆ ಮಾಂಸಹಾರವನ್ನ ತ್ಯಜಿಸಬೇಕು ಇಲ್ಲದಿದ್ದರೆ ಸಮಾಜದಲ್ಲಿ ಕೆಟ್ಟ ಹೆಸರು ಪಡೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲಾರರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಲಿಂಗವ ಕಟ್ಟಿದ್ದು ಸಾರ್ಥಕವಾಗಬೇಕೆಂದರೆ ಮಾಂಸಹಾರವನ್ನ ಸಂಪೂರ್ಣ ತ್ಯಜಿಸಲೇಬೇಕು ಎಂಬುದು. ಬಸವಣ್ಣನವರ ಈ ವಚನದ ಮೂಲ ಆಶಯ.

 

ಹೀಗೆ, ಲಿಂಗಾಯತರು ಸಂಪೂರ್ಣವಾಗಿ ಭಾರತೀಯ ಸನಾತನ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದಾರೆ, ಇಂತ ಲಿಂಗಾಯತ ಪರಂಪರೆಯನ್ನ ದುರುದ್ದೇಶದಿಂದ ಬೇರ್ಪಡಿಸಿ ಅದೊಂದು ಸ್ವತಂತ್ರ ಧರ್ಮ ಎಂದು ಹೇಳುತ್ತಾ ಅದನ್ನ ಇಸ್ಲಾಂ ಮತದೊಂದಿಗೆ ಸಮೀಕರಿಸುವುದು ಅಕ್ಷಮ್ಯ ಅಪರಾಧವಲ್ಲದೆ ಇನ್ನೇನು.

 

(ಈ ಲೇಖನದಲ್ಲಿ ಉಲ್ಲೇಖಿಸಿರುವ ವಚನಗಳು ಹಾಗೂ ವಚನಕಾರರ ಮಾಹಿತಿ: ಶ್ರೀ ತರಳಬಾಳು ಜಗದ್ಗುರು ಬ್ರಹನ್ಮಠ, ಸಿರಿಗೇರಿ)

 

ಕಿರಣ್.ಬಿ.


Wednesday, September 18, 2024

ಬಸವಾದಿ ಶರಣರಿಗಿತ್ತು ಇಸ್ಲಾಂ ದಾಳಿ ಕೋರರ ಅರಿವು.....



 19 ಸೆಪ್ಟೆಂಬರ್.2024.

ಹೊಸ ದಿಗಂತ.

ಇತ್ತೀಚಿಗೆ ಸಾಣಿಹಳ್ಳಿಶ್ರೀಗಳು ಚಿತ್ರದುರ್ಗದಲ್ಲಿ ನಡೆದ "ಸಾರ್ವಜನಿಕ ಕುರ್’ಆನ್  ಪ್ರವಚನ ಕಾರ್ಯಕ್ರಮ" ದಲ್ಲಿ ಭಾಗವಹಿಸಿ ಮಾತನಾಡುತ್ತ ಲಿಂಗಾಯತ ಮತ್ತು ಇಸ್ಲಾಂ ಧರ್ಮಗಳು ಬೇರೆ ಬೇರೆ ಆದರೂ ಸಮನಾಗಿ ಕಾಣಬೇಕು ಎಂದು ಕರೆಕೊಟ್ಟ ಹಿನ್ನಲೆಯಲ್ಲಿ ಈ ವಿಷಯ ಸಾಕಷ್ಟು ಚರ್ಚೆಗಳನ್ನ ಹುಟ್ಟು ಹಾಕಿ, ಒಂದಷ್ಟು ಹೊಸ ವಿಚಾರಗಳನ್ನ ಹೊರ ಹಾಕುವಂತೆ ಮಾಡಿದೆ. ತಾತ್ವಿಕವಾಗಿ ಇಸ್ಲಾಂ-ಲಿಂಗಾಯತ ಹೇಗೆ ಸಮಾನವಾಗಲು ಅಸಾಧ್ಯ ಅನ್ನುವ ವಿಚಾರ ಒಂದೆಡೆ ಆದರೆ  ಬಸವಣ್ಣನವರ ಕಾಲದ ಹೊತ್ತಿಗೆ ಇಸ್ಲಾಂ ತನ್ನ ಛಾಪು ಮೂಡಿಸಲು ಆರಂಬಿಸಿತ್ತು ಆದರೆ ಅದರ ಅರಿವು ಶರಣವೃಂದಕ್ಕೆ ಇತ್ತೇ ಎಂಬ ಕುತೂಹಲ ಮೂಡದೇ ಇರದು, ಇದಕ್ಕೆ ಉತ್ತರವನ್ನ ಶರಣರ ಹಿನ್ನೆಲೆ ಹಾಗು ವಚನಗಳಿಂದಲೇ ಪಡೆಯಬಹುದು.

ಭಾರತಕ್ಕೆ ಇಸ್ಲಾಂನ ಪ್ರವೇಶ 8ನೇ  ಶತಮಾನದಲ್ಲೇ ಕೇರಳದ ಮೂಲಕ ಆಗಿದ್ದು ನಂತರ ಅರಬ್ ವ್ಯಾಪಾರಿಗಳ ಜೊತೆ ಬಂದ ಮತ ಪ್ರಚಾರಕ ಸೂಫಿ ಸಂತರು ಭಾರತದಾದ್ಯಂತ ಸಂಚರಿಸಿ ಮತ ಪ್ರಚಾರ ಮಾಡುತ್ತಾರೆ. 8ನೇ ಶತಮಾನದ ನಂತರ ಇಸ್ಲಾಂ ದಾಳಿಕೋರರು ಹಿಂದೂ ದೇವಾಲಯಗಳನ್ನ ಒಡೆದು ಸಂಪತ್ತನ್ನ ಲೂಟಿ ಮಾಡಿದ್ದು ಇತಿಹಾಸ.ಈ ಸಮಯದಲ್ಲಿ (1025) ಒಡೆದು ಲೂಟಿ ಮಾಡಿದ್ದ ದೇವಾಲಯಗಳಲ್ಲಿ ಒಂದು ಶರಣ ಆದಯ್ಯನವರ ಆರಾಧ್ಯ ದೈವ ಸೌರಾಷ್ಟ್ರದ ಸೋಮೇಶ್ವರನ ದೇವಸ್ಥಾನ ಅಂದ್ರೆ ಇಂದಿನ ಗುಜರಾತಿನ ಸೋಮನಾಥ ದೇವಾಲಯ. ಸಾಸಲು ಗ್ರಾಮ, ಸೌರಾಷ್ಟ್ರ, ಗುಜರಾತ ರಾಜ್ಯದಲ್ಲಿ ಜನಿಸಿದ ಶರಣ ಆದಯ್ಯನವರ ವೃತ್ತಿ ವ್ಯಾಪಾರ ಆಗಿದ್ದು ಕಾರ್ಯಕ್ಷೇತ್ರ ಅಣ್ಣಿಗೇರಿ-ಪುಲಿಗೆರೆ-ಲಕ್ಷ್ಮೇಶ್ವರ-ಕಲ್ಯಾಣ ಆಗಿತ್ತು. ಇವರ ಒಟ್ಟು ೪೦೧ ವಚನಗಳು ಸಿಕ್ಕಿದ್ದು ಅವರ ಅಂಕಿತನಾಮ "ಸೌರಾಷ್ಟ್ರ ಸೋಮೇಶ್ವರ" (ಮಾಹಿತಿ ಮೂಲ: ಶ್ರೀ ತರಳಬಾಳು ಬ್ರಹನ್ಮಠ, ಸಿರಿಗೆರೆ)

ಬಿಜ್ಜಳನ ವಿಶಾಲ ಸಾಮ್ರಾಜ್ಯದ ಮಂತ್ರಿಯಾಗಿದ್ದ ಬಸವಣ್ಣ ಒಬ್ಬ ತತ್ವ ಜ್ಞಾನಿ ಹಾಗೂ ಸಮಾಜಸುಧಾರಣೆಯ ಹರಿಕಾರರಾಗಿದ್ದರು. ಅನುಭವ ಮಂಟಪದಲ್ಲಿ ಸಮಾಜದ ಎಲ್ಲ ವರ್ಗದಿಂದ ಬಂದ ಶರಣರೊಂದಿಗೆ ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸುತ್ತಿದ್ದರು. ಅದಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿ, ಸರಳೀಕರಿಸಿ ಸಮಾಜಕ್ಕೆ ಶಕ್ತಿಯನ್ನು ತುಂಬಿದ್ದವರು. ಇಂತಹ ಮಹಾನ್ ವ್ಯಕ್ತಿಯೊಬ್ಬರಿಗೆ ಶತಮಾನಗಳ ಹಿಂದೆಯೇ ಇಸ್ಲಾಂ ಬಂಡುಕೋರರು ಭಾರತೀಯ ಸಂಸ್ಕೃತಿ ನಾಶ ಹಾಗೂ ಸಂಪತ್ತು ಲೂಟಿಗಾಗಿಯೇ ದಂಡೆತ್ತಿ ಬರುತ್ತಿದ್ದದ್ದರ ಅರಿವು ಇತ್ತು ಎಂಬುದನ್ನ ಈ ಕೆಳಗಿನ ವಚನದ ಮೂಲಕ ತಿಳಿಯ ಬಹುದು.

ಗಾಂಧಾರಿ ಮಾಂಧಾರಿಯೆಂಬ ಅಹೋರಾತ್ರಿಯಲ್ಲಿ 

ಲಿಂಗವ ಪೂಜಿಸಬೇಕು.

ಊರ ಕೋಳಿ ಕೂಗದ ಮುನ್ನ,

ಕಾಡನವಿಲು ಒದರದ ಮುನ್ನ,

ಲಿಂಗವ ಪೂಜಿಸಬೇಕು.

*ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ*,

ತುಂಬಿ ಮುಟ್ಟಿ ಪುಷ್ಪ ನಿರ್ಮಾಲ್ಯವಾಗದ ಮುನ್ನ

ಲಿಂಗವ ಪೂಜಿಸಬೇಕು.

ಅದೆಂತೆಂದಡೆ;

'ಯೋ ಲಿಂಗಮರ್ಧರಾ ತ್ರಾ ತು ಶುಚಿರ್ಭೂತ್ವಾ ಪ್ರಪೂಜಯೇತ್

ಅಗ್ನಿಷ್ಟೋಮಸಹಸ್ರಸ್ಯ ಧರ್ಮಸ್ಯ ಲಭತೇ ಫಲಂ' ಎಂದುದಾಗಿ,

ಶುದ್ಧಾಂತಃಕರಣನಾಗಿ ಶಿವಪೂಜೆಯ ಮಾಡಬೇಕು,

ಆತಂಗೆ ಅಗ್ನಿಷ್ಟೋಮ ಸಹಸ್ರಫಲವಹುದು.

ತನ್ನೊಡನೆ ಮಲಗಿರ್ದ ಸತಿಯನೆಬ್ಬಿಸದೆ ಶಿವಲಿಂಗಕ್ಕೆರೆವ

ಸದ್ಭಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ,

ಕೂಡಲಸಂಗಮದೇವಾ


ಮೇಲಿನ ವಚನದಲ್ಲಿ ಶಿವಲಿಂಗ ಪೂಜೆಯನ್ನ ಬೆಳಿಗಿನ ಜಾವದಲ್ಲಿ ಮಾಡಿ ಮುಗಿಸಬೇಕೆಂದು ವಿವರಿಸುವಾಗ ಬರುವ ಸಾಲು “ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ” ಅಂತ ಹೇಳುವದರ ಹಿಂದಿನ ಅರ್ಥ ಬೆಳಿಗಿನ ಆಜಾನ್ ಕೂಗುವ ಮೊದಲೇ ನಿಮ್ಮ ಲಿಂಗ ಪೂಜೆಯನ್ನ ಮುಗಿಸಬೇಕು ಎಂದು. ಈ ಸಾಲಿನೊಂದಿಗೆ ಇನ್ನೊಂದು ಮಹತ್ವವಾದ ಅಂಶ ಒಳಗೊಂಡಿದೆ, ಅದೆಂದರೆ ಇದರಲ್ಲಿ ಬರುವ "ಪಾಪಿಗಳು" ಪದ, ಖ್ಯಾತ ಸಂಶೋಧಕ ದಿವಂಗತ ಎಂ ಎಂ ಕಲ್ಬುರ್ಗಿಯವರ ಸಂಶೋಧನೆ ಆದರಿಸಿ ಶ್ರೀ ಶಿವಾನಂದ ಜಾಮದಾರರು (ನಿವೃತ್ತ ಐಎಎಸ್ ಅಧಿಕಾರಿ ಹಾಗೂ ದಿವಂಗತ ಕಲ್ಬುರ್ಗಿಯವರ ಆಪ್ತರು) ಒಂದು ಸಂದರ್ಶನದಲ್ಲಿ ಹೇಳುವುದೇನೆಂದರೆ, ಮೂಲದಲ್ಲಿ ಇದ್ದ ಪದ "ಯವನರು" ಅನ್ನೋದನ್ನ ಯಾರೋ ತಿದ್ದಿ ಪಾಪಿಗಳು ಅಂತ ಮಾಡಿದ್ದಾರೆ. ಯವನರು ಅನ್ನುವ ಪದವನ್ನ ಬಸವಣ್ಣವರು ಗೋ ಹಂತಕ ಇಸ್ಲಾಂ ದಾಳಿಕೋರರನ್ನ ಉಲ್ಲೇಖಿಸಿಯೇ ಅನ್ನುವುದು ಸ್ಪಷ್ಟವಾಗುತ್ತದೆ. ಯವನರು ಅಂದರೆ ಗ್ರೀಕರು ಅಥವಾ ಮುಸ್ಲಿಮರು ಎಂದರ್ಥ. ಪದ ಯವನರೇ ಇರಲಿ ಅಥವಾ ಪಾಪಿಗಳೇ ಇರಲಿ, ಆ ಪದದ ಜೊತೆಗಿರುವ ಗೋವುಗಳನ್ನ ಕೊಲ್ಲುವವರ ಧ್ವನಿ ಕೇಳುವ ಮುನ್ನವೇ ಪೂಜೆ ಮುಗಿಸಿ ಅನ್ನುವುದೂ ಮುಖ್ಯವಾಗುತ್ತದೆ ಅಂದರೆ ಬೆಳಿಗಿನ ಆಜಾನ್ ಕರೆ ಕೇಳುವ ಮೊದಲೇ ನಿಮ್ಮ ಲಿಂಗ ಪೂಜೆ ಮಾಡಿ ಮುಗಿಸಿ ಎಂದು ಕರೆ ಕೊಡುವ ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ "ಛಲಬೇಕು ಶರಣಂಗೆ ಪರದೈವವನೊಲ್ಲೆಂಬ" ಅಂತಲೂ ಹೇಳಿದ್ದಾರೆ. ಪರದೈವ ಆರಾಧಕರು ಬಂಜಿಸಿದ ಸೌರಾಷ್ಟ್ರ ಸೋಮೇಶ್ವರನ ಆರಾಧಕ ಆದಯ್ಯನವರ ವಚನದಲ್ಲೂ ಪರದೈವದ ಉಲ್ಲೇಖ ಕೆಳಗಿನ ಈ ವಚನದಲ್ಲಿದೆ:.

ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ,

ಧೂಪದೀಪಾರತಿ ನೇಮವಲ್ಲ,

ಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ.

ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ.


ಈ ವಚನದಲ್ಲಿರುವ 'ಪರದೈವ' ಯಾವುದು ಅನ್ನೋದನ್ನ ವಚನಕಾರ ಶರಣ ಆದಯ್ಯನವರ ಹಿನ್ನೆಲೆ ಹಾಗೂ ಅದಕ್ಕೆ ಸಂಬಂದಿತ ಐತಿಹಾಸಿಕ ಘಟನೆ ಮತ್ತು ಮೇಲಿನ ವಿಶ್ಲೇಷಿಸಿತ ಬಸವಣ್ಣನವರ ವಚನವದ ಆಧಾರದಲ್ಲಿ ಅರ್ಥೈಸಿದಾಗ ಆದಯ್ಯನವರು ಅವರ ನೆಚ್ಚಿನ ದೈವ ಸೌರಾಷ್ಟ್ರದ ಸೋಮೇಶ್ವರ ದೇವಾಲಯ ಬಂಜಿಸಿದ ಮೊಹಮ್ಮದ್ ಘಜ್ನಿಯ ದೈವವೇ ಶಿವಭಕ್ತರಿಗೆ ಪರದೈವ. ಅಂತ  ಪರದೈವಕ್ಕೆ ಎರಗದೆ ಇರುವುದೇ ನೇಮ ಎಂದಿದ್ದಾರೆ ಹಾಗೂ ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ ಎಂದಿದ್ದಾರೆ, ಅರ್ಥಾತ್ ಬಂಜಕರ ಮೆಟ್ಟಿ ಸೋಮೇಶ್ವರಲಿಂಗ ನಿತ್ಯ ನಿರಂತರವಾಗಿ ನೆಲೆಯಾಗಿರಬೇಕು. 

ಪರದೈವದ ಬಗ್ಗೆ ಶರಣರಿಗೆ ಇದ್ದ ತಿರಸ್ಕಾರವನ್ನ ಸಾಣಿಹಳ್ಳಿ ಶ್ರೀಗಳು ಅವಲೋಕಿಸಿ ಬಸವಾನುಯಾಯಿಗಳ ದಿಕ್ಕು ತಪ್ಪಿಸುವಂತ ಸಂದೇಶ ಕೊಡಬಾರದೆನ್ನುವುದು ಬಸವತತ್ವ ಅನುಯಾಯಿಗಳ ಕೋರಿಕೆ.

✍️ ಕಿರಣ್ ಬಿ.


ವಿಜ್ಞಾನ ಸಾರಿದ ವೇದಾಂತ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು

12 June, 2026 ವಿಜ್ಞಾನ ಸಾರಿದ ವೇದಾಂತ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಭಾರತಿಯರೆಲ್ಲರು ಒಂದೇ ತಾಯಿಯ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಎಂದು ಹೇಳಿದಾಗ ಅದು ಖಂಡಿ...