Wednesday, June 3, 2026

ಕರ್ನಾಟಕಕ್ಕೂ ಲಗ್ಗೆ ಇಟ್ಟ ಅಕ್ರಮ ನುಸುಳುಕೋರರ ಸಮಸ್ಯೆ

 

ಉತ್ತರ ಪ್ರಭ:

03 ಜೂನ್, 2026

ಇತ್ತೀಚೆಗೆ ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಆಶ್ರಯ ಪಡೆಯುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಪೊಲೀಸ್ ಇಲಾಖೆಯು ವಿಶೇಷ ತಂಡವನ್ನು ರಚಿಸಿ, ಈ ಭಾಗದಲ್ಲಿರುವ ಅಪರಿಚಿತ ಬಂಗಾಳಿ ಭಾಷಿಕರ ತಪಾಸಣೆಗೂ ಮುಂದಾಗಿದೆ.

ಇದೇ ಹೊತ್ತಿನಲ್ಲಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದು, ಇದರ ವಿರುದ್ಧ ಕರ್ನಾಟಕದಾದ್ಯಂತ ಕೆಲವು ವಲಯಗಳಿಂದ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಇಲ್ಲಿ ನಾವೆಲ್ಲರೂ ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆ: ಈ ಪರಿಷ್ಕರಣೆಯಿಂದ ತೊಂದರೆಯಾಗುವುದು ಯಾರಿಗೆ? ಒಬ್ಬ ಸಾಮಾನ್ಯ ಭಾರತೀಯ ನಾಗರಿಕನಿಗೆ ಇದರಿಂದ ಯಾವುದೇ ಸಮಸ್ಯೆಯಾಗಲು ಸಾಧ್ಯವಿಲ್ಲ. ಇದು ಕೇವಲ ಮೃತಪಟ್ಟವರ ಅಥವಾ ಊರು ಬಿಟ್ಟು ಹೋದವರ ಹೆಸರುಗಳನ್ನು ತೆಗೆದುಹಾಕಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಸರಳ ಪ್ರಕ್ರಿಯೆ. ಹಾಗಿದ್ದ ಮೇಲೆ, ಕರ್ನಾಟಕದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗಳು ಅಕ್ರಮ ಬಾಂಗ್ಲಾದೇಶಿಗರಿಗೆ ಸಿಕ್ಕಿರಬಹುದಾದ 'ಮತದಾನದ ಹಕ್ಕನ್ನು' ರಕ್ಷಿಸುವ ವ್ಯವಸ್ಥಿತ ಪ್ರಯತ್ನವೇ ಎಂಬ ಗಂಭೀರ ಸಂಶಯ ಮೂಡುವುದು ಸಹಜ. ಇದನ್ನು ಆಳವಾಗಿ ಅರ್ಥಮಾಡಿಕೊಳ್ಳಲು ನಾವು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಇತಿಹಾಸವನ್ನು ಒಮ್ಮೆ ತಿರುವಿ ಹಾಕಬೇಕಾಗುತ್ತದೆ.


ಇತಿಹಾಸದ ಪಾಠ: ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಅನುಭವ

ಅಕ್ರಮ ವಲಸಿಗರು ಕೇವಲ ದೇಶದ ಭದ್ರತೆಗೆ ಸವಾಲಷ್ಟೇ ಅಲ್ಲ, ಸ್ಥಳೀಯ ಜನಸಂಖ್ಯೆ ಮತ್ತು ಸಂಸ್ಕೃತಿಯ ಸ್ವರೂಪವನ್ನೇ ಬದಲಾಯಿಸಬಲ್ಲರು ಎಂಬುದಕ್ಕೆ ಅಸ್ಸಾಂ ಮತ್ತು ಬಂಗಾಳದ ಇತಿಹಾಸವೇ ಸಾಕ್ಷಿ. ಸ್ವಾತಂತ್ರ್ಯ ಪೂರ್ವದಲ್ಲಿ, ಅಂದರೆ 1937ರಲ್ಲಿ ಅಂದಿನ ಅಸ್ಸಾಂ ಸರ್ಕಾರದ ಮುಖ್ಯಸ್ಥರಾಗಿದ್ದ ಸಯ್ಯದ್ ಮುಹಮ್ಮದ್ ಸಾದುಲ್ಲಾ ಅವರು "ಹೆಚ್ಚು ಆಹಾರ ಬೆಳೆಯಿರಿ" ಎಂಬ ಯೋಜನೆಯ ನೆಪದಲ್ಲಿ ಪೂರ್ವ ಬಂಗಾಳದಿಂದ ದೊಡ್ಡ ಮಟ್ಟದಲ್ಲಿ ಮುಸ್ಲಿಮರನ್ನು ಕರೆತಂದು ಕೃಷಿ ಭೂಮಿ ಹಂಚಿಕೆ ಮಾಡಿದರು. ಈ ಜನಸಂಖ್ಯಾ ಬದಲಾವಣೆಯ ಪರಿಣಾಮವಾಗಿಯೇ ಭಾರತದ ವಿಭಜನೆಯ ಸಮಯದಲ್ಲಿ ಅಸ್ಸಾಂನ ಸಿಲ್ಹೆಟ್ ಜಿಲ್ಲೆ ಪೂರ್ವ ಪಾಕಿಸ್ತಾನಕ್ಕೆ (ಇಂದಿನ ಬಾಂಗ್ಲಾದೇಶ) ಸೇರಬೇಕಾಯಿತು. ಅಸ್ಸಾಂನ ಮೂಲ ಸಂಸ್ಕೃತಿಯನ್ನು ರಕ್ಷಿಸುವ ಇದೇ ಅಕ್ರಮ ವಲಸೆಯ ವಿಷಯವನ್ನು ಮುಂದಿಟ್ಟುಕೊಂಡು ಹೋರಾಡಿದ ಹಿಮಂತ ಬಿಸ್ವ ಶರ್ಮಾ ಅವರಿಗೆ ಸಿಕ್ಕ ಜನಬೆಂಬಲವೇ ಇಂದು ಅವರು ಅಸ್ಸಾಂನ ಶಕ್ತಿಯುತ ಮುಖ್ಯಮಂತ್ರಿಯಾಗಲು ಕಾರಣವಾಯಿತು.

ಮತ್ತೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ 'SIR' ಪ್ರಕ್ರಿಯೆಯಲ್ಲಿ ಬರೋಬ್ಬರಿ 91 ಲಕ್ಷ ನಕಲಿ ಅಥವಾ ಅಕ್ರಮ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಇದರಲ್ಲಿ ಸಿಂಹಪಾಲು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರದೇ ಆಗಿತ್ತು. ಮತದಾರರ ಗುರುತನ ಪತ್ರ, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಮಾಡಿ ಕೊಡುವ ಒಂದು ವ್ಯವಸ್ತಿತ ಜಾಲವೇ ಇದ್ದು ನುಸುಳುಕೋರರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡುವವರಿದ್ದಾರೆ. ಇದೇ ಕಾರಣಕ್ಕೆ ಅಲ್ಲಿ "ಹುಡುಕಿ (Detect), ಪಟ್ಟಿಯಿಂದ ತೆಗೆಯಿರಿ (Delete) ಮತ್ತು ಓಡಿಸಿ (Deport)" ಎಂಬ ಸ್ಪಷ್ಟ ನೀತಿಯೊಂದಿಗೆ ಹೊಸ ರಾಜಕೀಯ ಜಾಗೃತಿ ಮೂಡಿದೆ. ಗಡಿ ಭದ್ರತೆಯ ವಿಷಯದಲ್ಲಿ ಕಠಿಣ ನಿಲುವುಗಳನ್ನ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಾಗಿಯೂ ಅಕ್ರಮ ವಲಸಿಗರು ದಕ್ಷಿಣ ಭಾರತದತ್ತ ಮುಖ ಮಾಡಿರುವುದು ವಿಪರ್ಯಾಸವೇ ಸರಿ. 


1991ರ ಕೊಲ್ಕತ್ತಾ ಘಟನೆ ಮತ್ತು ಆರ್‌ಎಸ್‌ಎಸ್ ನಿಲುವು

ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಪಶ್ಚಿಮ ಬಂಗಾಳವು ಅಕ್ರಮ ವಲಸಿಗರ ಸುರಕ್ಷಿತ ತಂಗುದಾಣವಾಗಿ ಮಾರ್ಪಟ್ಟಿದ್ದು ವಿಪರ್ಯಾಸ. ಈ ನುಸುಳುಕೋರರ ಧಾಷ್ಟ್ರ್ಯ ಎಷ್ಟರಮಟ್ಟಿಗೆ ಬೆಳೆಯಿತೆಂದರೆ, 1991ರಲ್ಲಿ ಕಮ್ಯುನಿಸ್ಟ್ ಆಡಳಿತವಿದ್ದಾಗ ಕೊಲ್ಕತ್ತಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಲಸಿಗರ ಗುಂಪೊಂದು, "ನಮಗೆ ಭಾರತದಲ್ಲಿ ವೋಟ್ ಮಾಡುವ ಹಕ್ಕನ್ನು ಕೊಟ್ಟು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ, ಆದ್ದರಿಂದ ನಮಗೆ ಭಾರತದ ಪೌರತ್ವವನ್ನೂ ನೀಡಬೇಕು" ಎಂದು ಬಹಿರಂಗವಾಗಿ ಆಗ್ರಹಿಸಿತ್ತು. ಸಾರ್ವಭೌಮ ದೇಶವೊಂದರೊಳಗೆ ಅಕ್ರಮವಾಗಿ ನುಗ್ಗಿದ ಜನಾಂಗವೊಂದು ಇಷ್ಟೊಂದು ಧೈರ್ಯ ಪ್ರದರ್ಶಿಸಿದ್ದು ದೇಶದ ಆಂತರಿಕ ಭದ್ರತೆಗೆ ಎದುರಾದ ನೇರ ಸವಾಲಾಗಿತ್ತು.

ಈ ಆಘಾತಕಾರಿ ಘಟನೆಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ಯಾವುದೇ ರಾಜಕೀಯ ಮುಲಾಜಿಲ್ಲದೆ ಕಠಿಣ ನಿಲುವನ್ನು ತಳೆದು ದೇಶಾದ್ಯಂತ ಜಾಗೃತಿ ಮೂಡಿಸಿತು. ಸಂಘವು ಅಂದಿನಿಂದಲೇ ಸಮಾಜದ ಮುಂದೆ ಸ್ಪಷ್ಟ ಸೈದ್ಧಾಂತಿಕ ವಿಭಜನೆಯನ್ನು ಇಟ್ಟಿತು:

'ನಿರಾಶ್ರಿತರು' (Refugees): ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಪ್ರಾಣ ಉಳಿಸಿಕೊಳ್ಳಲು ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು ಮತ್ತು ಬೌದ್ಧರನ್ನು 'ನಿರಾಶ್ರಿತರು' ಎಂದು ಪರಿಗಣಿಸಿ ಅವರಿಗೆ ಆಶ್ರಯ ನೀಡಬೇಕು.

'ನುಸುಳುಕೋರರು' (Infiltrators): ಕೇವಲ ಆರ್ಥಿಕ ಲಾಭ ಹಾಗೂ ದೇಶದ ಜನಸಂಖ್ಯಾ ಸ್ವರೂಪವನ್ನು ಬದಲಿಸುವ ರಾಜಕೀಯ ಉದ್ದೇಶದಿಂದ ಅಕ್ರಮವಾಗಿ ಬಂದವರನ್ನು 'ನುಸುಳುಕೋರರು' ಎಂದು ಕರೆದು ದೇಶದಿಂದ ಹೊರಹಾಕಬೇಕು.


*ಉಪಸಂಹಾರ:* ಕರ್ನಾಟಕಕ್ಕೆ ಎಚ್ಚರಿಕೆಯ ಗಂಟೆ

ಅಂದು 1991ರಲ್ಲಿ ಕೊಲ್ಕತ್ತಾದಲ್ಲಿ ಪೌರತ್ವ ಕೇಳುವ ಧಾಷ್ಟ್ರ್ಯ ತೋರಿದ್ದ ನುಸುಳುಕೋರರ ಜಾಲ, ಇಂದು ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರಿನವರೆಗೂ ಅಲ್ಲದೆ ದಕ್ಷಿಣ ಭಾರತದಾದ್ಯಂತ ವೋಟ್ ಬ್ಯಾಂಕ್ ಮತ್ತು ಅಗ್ಗದ ಕೂಲಿ ಕಾರ್ಮಿಕರ ರೂಪದಲ್ಲಿ ಹರಡಿಕೊಂಡಿರುವುದು ಆಂತರಿಕ ಭದ್ರತೆಯ ಎಚ್ಚರಿಕೆಯ ಗಂಟೆಯಾಗಿದೆ.  ಅಂದು ಆರ್‌ಎಸ್‌ಎಸ್ ವ್ಯಕ್ತಪಡಿಸಿದ್ದ ಆತಂಕಗಳು ಇಂದು ನಕಲಿ ಆಧಾರ್ ಮತ್ತು ವೋಟರ್ ಐಡಿಗಳ ರೂಪದಲ್ಲಿ ಸತ್ಯವಾಗುತ್ತಿವೆ.

'SIR' ನಂತಹ ತೀವ್ರ ಪರಿಷ್ಕರಣೆಗಳು ಜಾರಿಯಾಗುವಾಗ ಬಡ ಭಾರತೀಯ ನಾಗರಿಕರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕಾದ್ದು ಎಷ್ಟು ಮುಖ್ಯವೋ, ಅದೇ ಹೊತ್ತಿನಲ್ಲಿ ಅಕ್ರಮವಾಗಿ ನುಸುಳಿದ ವಿದೇಶಿಗರನ್ನು ಗುರುತಿಸಿ ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಅಷ್ಟೇ ತುರ್ತು ಅಗತ್ಯವಾಗಿದೆ. ಇಲ್ಲದಿದ್ದರೆ ಅಸ್ಸಾಂ, ಬೆಂಗಾಳಕ್ಕೆ ತಗುಲಿದ ಕಾಯಿಲೆ ಕರ್ನಾಟಕಕ್ಕೂ ಹರಡಲು ಬಹಳ ದಿನ ಬೇಕಾಗಿಲ್ಲ.

- ಕಿರಣ್.ಬಿ.




No comments:

Post a Comment

ವಿಜ್ಞಾನ ಸಾರಿದ ವೇದಾಂತ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು

12 June, 2026 ವಿಜ್ಞಾನ ಸಾರಿದ ವೇದಾಂತ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಭಾರತಿಯರೆಲ್ಲರು ಒಂದೇ ತಾಯಿಯ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಎಂದು ಹೇಳಿದಾಗ ಅದು ಖಂಡಿ...